Sunday 29 May, 2011

ಏಕಾಂತ


ಏಕಾಂತವೆಂದರೆ
ಕೆಲವರಿಗೆ ಅಸಹನೆ
ಮತ್ತೆ ಹಲವರಿಗೆ ಭಯ
ನನಗೆ, ಅದೇ ಬಲು ಪ್ರಿಯ.
ನನ್ನೊಳಗಿರುವ ನನ್ನನ್ನು
ಹೆಕ್ಕಿ ತೆಗೆದು ಬೆಳಕಿಗಿಟ್ಟ
ಏಕಾಂತವೇ ನನ್ನ ನಿಜ ಗೆಳೆಯ.

ಏಕಾಂತವೆಂದರೆ ಒಂಟಿತನವಲ್ಲ
ಅದು ನನ್ನೊಳಗಿರುವ ನನಗೆ
ನಾ ಕೊಡಬೇಕಾದ ಸಮಯ.
ಅಪ್ಪ, ಅಮ್ಮ, ಅಣ್ಣ, ತಂಗಿ,
ಗೆಳೆಯ, ಗೆಳತಿ.... ಹೀಗೆ
ಎಲ್ಲರಿಗಾಗಿ ಸಮಯವಿದೆ.
ಹಾಗೆಯೇ..
ನನ್ನೊಳಗಿರುವ ನನ್ನೊಡನೆಯೂ
ನಾ ಕೊಂಚ ಸಮಯ ಕಳೆಯಬೇಕಿದೆ.

ನನ್ನನ್ನು ನಾನೇ ಹೊಗಳಿಕೊಳ್ಳಲು
ನನ್ನನ್ನು ನಾನು ತಿದ್ದಿಕೊಳ್ಳಲು
ಒಟ್ಟಿನಲ್ಲಿ ನನ್ನ ಉತ್ತಮಪಡಿಸಿಕೊಳ್ಳಲು
ನನ್ನೊಳಗಿರುವ ನನಗೆ ಸಮಯ ಇಡಬೇಕಿದೆ.
ನನ್ನನ್ನು ನಾನೇ ಅರಿಯಬೇಕಿದೆ.

ಏಕಾಂತದಲ್ಲೇ ಅಲ್ಲವೆ,
ಮನಸ್ಸು ಪೂರ್ಣ ತೆರೆದುಕೊಳ್ಳುವುದು
ಸಿಹಿ ನೆನಪುಗಳು ಮರುಕಳಿಸಿ
ಮೈ ಝುಮ್ಮೆನ್ನುವುದು
ಯಾತನೆಗಳ ನೆನೆದು
ಮತ್ತೆ ಮತ್ತೆ ಅಳಬೇಕೆನಿಸುವುದು.
ಹೀಗೆ, ಏಕಾಂತದಲ್ಲಷ್ಟೇ
ನನ್ನ ಮನಸ್ಸಿನಾಳಕ್ಕೆ ಇಳಿದು
ನನ್ನ ನಾ ಅರಿಯಬಹುದು.

ನೀವೂ ಏಕಾಂತದಲ್ಲೊಮ್ಮೆ ಮಿಂದು ನೋಡಿ.
ಏಕೆಂದರೆ, ಏಕಾಂತವೇ
ಮನಸ್ಸಿನ ಮುಖಕ್ಕೆ ನಿಜವಾದ ಕನ್ನಡಿ

Saturday 14 May, 2011

ಹಳೆಯ ಚಿತ್ರಗೀತೆಗಳ ಸಾಹಿತ್ಯ.. ಒಂದು ಹಿನ್ನೋಟ


ಸಂಗೀತ, ಹಾಡುಗಳು ಅಂದ್ರೆ ಬಹುತೇಕ ಜನರಿಗೆ ಇಷ್ಟ. ನನಗೆ ಕೊಂಚ ಜಾಸ್ತಿನೇ ಇಷ್ಟ. ಸಾಧ್ಯ ಆದಾಗಲೆಲ್ಲಾ ಹಾಡು ಕೇಳೋದು ನನ್ನ ಛಟ. ವಿಶೇಷವಾಗಿ ಹಳೆಯ ಚಿತ್ರಗೀತೆಗಳು ಮತ್ತು ಭಾವಗೀತೆಗಳು ನನ್ನ ಮೆಚ್ಚಿನ ಆಯ್ಕೆ. ಎಂದಿನಂತೆ ಇಂದೂ ಕೂಡ, ಕೆಲಸ ಮುಗಿಸಿ ಕಛೇರಿಯಿಂದ ಮನೆಗೆ ಹೋಗ್ತಾ ಇದ್ದಾಗ, ಕಿವಿಗೆ ಹೆಡ್ ಫೋನ್ ಸಿಗಿಸಿ, ನನ್ನ ಮೊಬೈಲಿನಲ್ಲಿ ಇರುವ ಹಾಡುಗಳನ್ನ ಆಲಿಸಲು ಶುರುವಿಟ್ಟೆ. ಕೆಲವು ಹಾಡುಗಳ ನಂತರ, ಪುಟ್ಟಣ್ಣನವರ ನಿರ್ದೇಶನದ ’ಪಡುವರಳ್ಳಿ ಪಾಂಡವರು’ ಚಿತ್ರದಿಂದ ಎಸ್.ಪಿ.ಬಿ ಅವರು ಹಾಡಿರುವ ’ಜನುಮ ನೀಡಿದ ಭೂ ತಾಯಿಯ...’ ಶುರುವಾಯಿತು.

ಬಸ್ಸಿನ ಕಿಟಕಿಯ ಗಾಜಿಗೆ ತಲೆಯೊರಗಿಸಿ, ಹಾಡಿನ ಸಾಹಿತ್ಯದ ಕಡೆ ಗಮನ ಹರಿಸಿದೆ. ಪ್ರೊ. ದೊಡ್ಡರಂಗೇಗೌಡರು ಬರೆದಿರುವ ಹಾಡದು. ಕೇಳುತ್ತಾ ತುಂಬಾ ಭಾವುಕ ಆಗ್ಬಿಟ್ಟೆ ಅನ್ನಿಸ್ತು. ಅದು ಆ ಹಾಡಿನಲ್ಲಿದ್ದ ಸಂಗೀತ ಮತ್ತು ಸಾಹಿತ್ಯದ ಶಕ್ತಿ. ಇಂದಿನ ಚಿತ್ರ ಗೀತೆಗಳ ಸಾಹಿತ್ಯ, ಹೇಗೆ ನಮ್ಮ ಸಂಸ್ಕೃತಿಯನ್ನ ಕೊಲ್ಲುತ್ತಾ ಇದೆ, ಹೇಗೆ ಸಮಾಜದ ಸ್ವಾಸ್ಥ್ಯವನ್ನ ಹಾಳು ಮಾಡ್ತಾ ಇದೆ ಅಂತ ವಿವರಿಸಿ ಹೇಳೊ ಅವಶ್ಯಕತೆ ಇಲ್ಲ ಅನ್ಸುತ್ತೆ. ಈ ’ಜನುಮ ನೀಡಿದ ಭೂ ತಾಯಿಯ..’ ತರಹದ ಸಾಹಿತ್ಯ ಮತ್ತು ಪಡುವರಳ್ಳಿ ಪಾಂಡವರು ತರಹದ ಚಿತ್ರಗಳು, ನಮಗೆ ಇಂದು ಸಿಗ್ತಾ ಇಲ್ಲ ಅನ್ನೋದು ಕನ್ನಡಿಗರ ದೌರ್ಭಾಗ್ಯ. ಇದೆಲ್ಲಾ ನನ್ನ ತಲೆಯಲ್ಲಿ ಹಾಗೆ ಜಾರಿದಾಗ, ನನ್ನ ಮನಸ್ಸಿಗೆ ಹೊಳೆದಿದ್ದು ಈ ಹಾಡಿನ ಸಾಹಿತ್ಯವನ್ನ ನಿಮ್ಮೆಲ್ಲರ ಜೊತೆ ಹಂಚಿಕೋಬೇಕು ಅಂತ. ಇದರ ಜೊತೆಗೆ ಇನ್ನು ಬೇರೆ ಬೇರೆ ಅದ್ಭುತವಾದ ಸಾಹಿತ್ಯ ಇರುವ ಹಾಡುಗಳನ್ನು ಕೂಡ ನಿಮ್ಮ ಗಮನಕ್ಕೆ ಅಥವಾ ನಿಮಗೆ ಮತ್ತೆ ನೆನಪು ಮಾಡಿಕೊಡಬೇಕೆಂಬುದೇ ನನ್ನ ಬಯಕೆ. ದಯಮಾಡಿ ಎರಡು ನಿಮಿಷವನ್ನ ಈ ಹಾಡುಗಳ ಸಾಹಿತ್ಯವನ್ನ ಓದಲು ವ್ಯಯಿಸಿ.


ಜನ್ಮ ನೀಡಿದ ಭೂ ತಾಯಿಯ

ಚಿತ್ರ: ಪಡುವರಳ್ಳಿ ಪಾಂಡವರು
ನಿರ್ದೇಶನ: ಪುಟ್ಟಣ್ಣ ಕಣಗಾಲ್
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ: ಪ್ರೊ. ದೊಡ್ಡರಂಗೇಗೌಡರು
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಮ್

ಜನ್ಮ ನೀಡಿದ ಭೂ ತಾಯಿಯ
ನಾ ಹೇಗೆ ತಾನೆ ತೊರೆಯಲಿ?    |ಪ|
ಅನ್ನ ನೀಡಿದ ಈ ಮಣ್ಣನು
ನಾ ಹೇಗೆ ತಾನೆ ಮರೆಯಲಿ?

ಈ ಗಾಳಿ, ಈ ನೀರು ನನ್ನ ಒಡಲು
ಈ ಬೀದಿ, ಈ ಮನೆಯೆ ನನ್ನ ತೊಟ್ಟಿಲು,
ಈ ಮಾಚ, ಈ ಕೆಂಚ ಎಲ್ಲಾ ಹೆಸರು
ಎಂದೆಂದೂ ನನ್ನೆದೆಯ ಅಚ್ಚನೆಯ ಹಸಿರು  |ಪ|

ಈ ಗೌರಿ, ಈ ಗಂಗೆ ಹಾಲ ಕುಡಿದೆ
ಓಡೋಡಿ ನಲಿದೆ, ಊರೆಲ್ಲಾ ಕುಣಿದೆ
ಕಾಳವ್ವ, ಸುಬ್ಬವ್ವ ನನ್ನ ಎತ್ತಿ ಆಡಿ
ಹರಸಿದ ತಾಯಿಯರ ಹೇಗೆ ಮರೆಯಲಿ?   |ಪ|

ಈ ಜೀವ, ಈ ದೇಹ ಅರೆದು, ಅರೆದು
ಹೊಸ ಆಸೆ ಹೊಸ ಹಾದಿ ಕನಸೆಂದು ತಿಳಿದು
ಬಾನತ್ತ ಭುವಿಯತ್ತ ಹೆಚ್ಚಾಗಿ ನೋಡುವ
ಪಂಜರದ ಹಕ್ಕಿಗಳ ಹೇಗೆ ಮರೆಯಲಿ?

ಜನ್ಮ ನೀಡಿದ ಭೂ ತಾಯಿಯ
ನಾ ಹೇಗೆ ತಾನೆ ತೊರೆಯಲಿ?    |ಪ|
ಅನ್ನ ನೀಡಿದ ಈ ಮಣ್ಣನು
ನಾ ಹೇಗೆ ತಾನೆ ಮರೆಯಲಿ?

ಹಾಡನ್ನೊಮ್ಮೆ ಇಲ್ಲಿ ಕೇಳಿ..